ರೈತರ ರಾಗಿ ಬೆಳೆಗೆ ಬೆಂಬಲ ಬೆಲೆ : ಸಚಿವ ಕೆ.ವೆಂಕಟೇಶ್


     ರೈತರು ಬೆಳೆದ ಹಲವು ಬೆಳೆಗಳಲ್ಲಿ ರಾಗಿ ಬೆಳೆಗೆ ಮಾತ್ರ ಈ ವರ್ಷ ಬೆಂಬಲ ಬೆಲೆ ದೊರೆತಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್ ರವರು ತಿಳಿಸಿದರು

     ಬೆಟ್ಟದಪುರ:  ಪಿರಿಯಾಪಟ್ಟಣ ತಾಲೂಕಿನ ಮರದೂರು ವಡ್ಡರಹಳ್ಳಿ , ಕೊತ್ತವಳ್ಳಿ ಕೊಪ್ಪಲು ಮೇಲೂರು ಮತ್ತು ಬೆಟ್ಟದಪುರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ಬೆಟ್ಟದಪುರ ಎಪಿಎಂಸಿ ಆವರಣದಲ್ಲಿ 2026 ನೇ ಸಾಲಿನ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ವರ್ಷ ಪ್ರತಿ ಕ್ವಿಂಟಾಲ್  ರಾಗಿಯನ್ನು 4290 ರೂಪಾಯಿಗೆ ಖರೀದಿ ಮಾಡಲಾಗುತ್ತಿತ್ತು ಈ ವರ್ಷ ಕ್ವಿಂಟಲ್ ಗೆ 4886 ರೂಪಾಯಿಯನ್ನು ನೀಡಿ ರೈತರಿಗೆ ಬೆಂಬಲ ಬೆಲೆಯನ್ನು ನೀಡಲಾಗುತ್ತಿದೆ. 2025 ನೇ ಸಾಲಿನಲ್ಲಿ ರೈತರಿಂದ ಕೇವಲ 20 ಕ್ವಿಂಟಲ್ ರಾಗಿಯನ್ನು ಮಾತ್ರ ಖರೀದಿಸಲಾಗುತ್ತಿತ್ತು ಈ ಬಾರಿ ಹತ್ತರಿಂದ ಐವತ್ತು ಕ್ವಿಂಟಾಲ್ ವರೆಗೆ ಖರೀದಿ ಮಾಡಲಾಗುತ್ತಿದ್ದು  ರೈತರು ತಮ್ಮ ತಮ್ಮ ರಾಗಿಯನ್ನು ತಾವೇ ನೊಂದಾಯಿಸಿ ಬೆಂಬಲಿತ ಬೆಲೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಬೇಕು. ಮಧ್ಯಸ್ಥರಾದ ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರಿಗೆ ತಮ್ಮ ರಾಗಿಯನ್ನು ಕಡಿಮೆ ಬೆಲೆಗೆ ನೀಡಿ ಲಾಭವಿಲ್ಲದೆ ನಷ್ಟವನ್ನು ಅನುಭವಿಸುವ ಬದಲು ಸರ್ಕಾರ ನೀಡುತ್ತಿರುವ ಬೆಂಬಲ ಬೆಲೆಯನ್ನು ಉಪಯೋಗಿಸಿಕೊಳ್ಳಿ ಎಂದು ರೈತರಿಗೆ ಸಲಹೆ ನೀಡಿದರು.

                                 

     ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಸ್ವಾಮಿ ಗೌಡ ರವರು ರೈತರು ತರುವ ರಾಗಿ ಚೀಲಗಳಿಗೆ ಚೀಲವನ್ನು ಇಳಿಸಿಕೊಳ್ಳುವಂತಹ ಕಾರ್ಮಿಕರು ಹಣವನ್ನು ಪಡೆದುಕೊಳ್ಳುತ್ತಿರುವುದು ರೈತರಿಗೆ ನಷ್ಟವನ್ನು ನೀಡುತ್ತಿದೆ. ಅದರಲ್ಲೂ ಬೆಟ್ಟದಪುರ ಭಾಗದಲ್ಲಿ ಹೆಚ್ಚಿನ ಹಣ ಪಡೆಯುತ್ತಿರುವುದರಿಂದ ತಮ್ಮ ಭಾಗದಲ್ಲಿರುವ ಸಣ್ಣ ಸಣ್ಣ ರೈತರಿಗೆ ಹೆಚ್ಚಿನ ಸಮಸ್ಯೆಯಾಗುತಿದೆ ಹಾಗೂ ರಾಗಿ ಕೇಂದ್ರಗಳಲ್ಲಿ ಹೆಚ್ಚಿನ ರೈತರು ಬರುವುದರಿಂದ ಕಿಲೋಮೀಟರ್ ಗಟ್ಟಲೆ ರಾಗಿಯನ್ನು ಹೊತ್ತು ತಂದ ವಾಹನಗಳು ನಿಂತು ಗಲಭೆ ಉಂಟಾಗುತ್ತಿದ್ದು  ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು 

     ಮನವಿಯನ್ನು ಆಲಿಸಿದ ಸಚಿವರು ರಾಗಿ ಇಳಿಸುವಂತಹ ಎಪಿಎಂಸಿ ಕಾರ್ಮಿಕರಿಗೆ ರೈತರು ಯಾವುದೇ ರೀತಿಯ ಹಣವನ್ನು ನೀಡುವಂತಿಲ್ಲ ಕಾರ್ಮಿಕರಿಗೆ ಹಣವನ್ನು ಕೊಡಬೇಕಾದದ್ದು ಗುತ್ತಿಗೆ ತೆಗೆದುಕೊಂಡ ಗುತ್ತಿಗೆದಾರರ ಕೆಲಸ, ಇನ್ನು ಮುಂದೆ ಈ ರೀತಿಯ ಸಮಸ್ಯೆ ಉಂಟಾಗದಂತೆ ತಾಲೂಕು ದಂಡಾಧಿಕಾರಿಗಳು, ಕಂದಾಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಹಾಗೂ ಈ ಬಾರಿ ತಾಲೂಕಿನಲ್ಲಿ ಒಟ್ಟು ನಾಲ್ಕು ರಾಗಿಯ ಕೇಂದ್ರಗಳನ್ನು ತೆರೆಯಲಾಗಿದ್ದು ರೈತರು ದಿನಗಟ್ಟಲೆ ಕಾದು ನಿಲ್ಲುವುದು ತಪ್ಪುತ್ತದೆ ಹಾಗೂ ಗಲಭೆಯನ್ನು ನಿಯಂತ್ರಿಸಿ ರೈತರಿಗೆ ಸಹಕಾರಿಯಾಗಲಿ ಎಂದು ಪ್ರತಿ ರಾಗಿ ಖರೀದಿ ಕೇಂದ್ರಕ್ಕೆ ನಾಲ್ಕು ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು  

                                     

    ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಇ.ಪಿ. ಲೋಕೇಶ್ , ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಕಿರಣ್ , ನಾಗರಿಕ   ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ  ಡಾಕ್ಟರ್  ಮಂಟೇಸ್ವಾಮಿ, ಆಹಾರ ಶಿರಸ್ತೆದಾರ್ ಸಣ್ಣ ಸ್ವಾಮಿ, ರಾಗಿ ಖರೀದಿ ಅಧಿಕಾರಿಗಳಾದ ಮಂಜುನಾಥ್, ಗೀತಾ, ಶಾಂತ, ರಶ್ಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನ್ ಬಾಬು, ಡಿ ಟಿ ಸ್ವಾಮಿ, ರೈತ ಸಂಘದ ಮುಖಂಡರಾದ  ಕೋಮಲಪುರ ಸ್ವಾಮಿ ಗೌಡ, ಕೊಣಸೂರು ಆನಂದ್, ವಿಜಯ ದೇವರಾಜೇ ಅರಸ್, ಹೊಲದಪ್ಪ, ಚಿಕ್ಕೇಗೌಡ, ಮಹದೇವ್, ಮಂಜುನಾಥ್ ಹರೀಶ್, ಜಯರಾಮೇಗೌಡ,ಮಲ್ಲೇಗೌಡ,ರವಿ, ಹಾಗೂ ರೈತ್ರು ಮತ್ತು ಗ್ರಾಮಸ್ಥರು ಹಾಜರಿದ್ದರು.

 ವರದಿ:  ರತನ್ ಸಿಂಗ್ 

Post a Comment

0 Comments